ಪರಿಚಯ
ಶಾತವಾಹನರು ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದ ಮೊದಲ ರಾಜಮನೆತನವಾಗಿದೆ.
ಇವರು ಮೌರ್ಯರ ಸಾಮಂತ ದೊರೆಗಳಾಗಿದ್ದು, ಮೌರ್ಯರ ಅವನತಿಯ ನಂತರ ದಕ್ಷಿಣದಲ್ಲಿ ಸ್ವತಂತ್ರ ಆಳ್ವಿಕೆಯನ್ನು ಆರಂಭಿಸಿದರು.
ಶಾತವಾಹನರ ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಲಿಖಿತ ರೂಪದ ದಾಖಲೆಗಳು ಆರಂಭವಾದವು.
ಈ ರಾಜವಂಶವು ಸುಮಾರು 460 ವರ್ಷಗಳ ಕಾಲ 30 ಅರಸರಿಂದ ಆಳಲ್ಪಟ್ಟಿತು ಎಂದು ಮತ್ಸ್ಯ ಪುರಾಣ ಉಲ್ಲೇಖಿಸುತ್ತದೆ.
ಭಾಗವತ ಪುರಾಣದ ಪ್ರಕಾರ, 19 ಜನ ಅರಸರು 300 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದಾರೆ.
ಶಾತವಾಹನರ ಮೂಲವು ಆಂಧ್ರ ಪ್ರದೇಶಕ್ಕೆ ಸಂಬಂಧಿಸಿದೆ ಎಂದು ಅಶೋಕನ ಶಾಸನಗಳಲ್ಲಿ 'ಆಂಧ್ರಬೃತ್ಯರು' ಎಂದು ಉಲ್ಲೇಖಿಸಲಾಗಿದೆ.
ಆದರೆ, ಬಳ್ಳಾರಿ ಜಿಲ್ಲೆಯ ಹಿರೇಹಡಗಲಿ ಶಾಸನವು ಇವರು ಕರ್ನಾಟಕದವರು ಎಂದು ಉಲ್ಲೇಖಿಸುತ್ತದೆ.
ಪ್ರಮುಖ ಅರಸರು
ಸಿಮುಖ (ಕ್ರಿ.ಪೂ 235-212): ಈತ ಶಾತವಾಹನರ ಸ್ಥಾಪಕ.
ಇವನ ರಾಜಧಾನಿ ಪೈಠಾಣ. ನಾಸಿಕ್ ಶಾಸನವು ಈತನನ್ನು 'ಕಣ್ವರ ದರ್ಪ ಮುರಿದವ' ಎಂದು ಮತ್ತು ನಾನಾಘಾಟ್ ಶಾಸನವು 'ರಾಯ ಸಿಮುಖ' ಎಂದು ಉಲ್ಲೇಖಿಸುತ್ತದೆ. 1ನೇ ಶಾತಕರ್ಣಿ (ಕ್ರಿ.ಪೂ 194-148): ಶಾತವಾಹನರ ಆರಂಭಿಕ ದೊರೆ.
ಇವನು ಬ್ರಾಹ್ಮಣ ಧರ್ಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದ ಮತ್ತು ಅಶ್ವಮೇಧ ಯಾಗವನ್ನು ಕೈಗೊಂಡ. 'ದಕ್ಷಿಣಪಥಪತಿ' ಹಾಗೂ 'ಅಪ್ರತಿಸತ' ಎಂಬ ಬಿರುದುಗಳನ್ನು ಹೊಂದಿದ್ದ. 2ನೇ ಶಾತಕರ್ಣಿ (ಕ್ರಿ.ಪೂ 50-25): ಈತ ಸಾಂಚಿಯ ಸ್ತೂಪಕ್ಕೆ ನಾಲ್ಕು ಅಲಂಕೃತ ದ್ವಾರಬಾಗಿಲುಗಳನ್ನು ನಿರ್ಮಿಸಿದ.
ಹಾಳ (ಕ್ರಿ.ಶ 20-24): 17ನೇ ಪ್ರಸಿದ್ಧ ಅರಸನಾದ ಇವನ ಬಿರುದು ಕವಿಪುಂಗವ.
ಈತ ಪ್ರಾಕೃತ ಭಾಷೆಯಲ್ಲಿ ಗಾಥಾಸಪ್ತಶತಿ ಎಂಬ ಕೃತಿಯನ್ನು ರಚಿಸಿದ.
ಗೌತಮಿಪುತ್ರ ಶಾತಕರ್ಣಿ (ಕ್ರಿ.ಶ 106-130): ಈತ 23ನೇ ಪ್ರಸಿದ್ಧ ದೊರೆ.
ನಾಸಿಕ್ ಶಾಸನವು ಈತನನ್ನು 'ಏಕಬಾರ ಸಮಣ' ಎಂದು ಉಲ್ಲೇಖಿಸುತ್ತದೆ. 'ತ್ರೈ ಸಮುದ್ರತೋಯಪೀತವಾಹನ' ಎಂಬ ಬಿರುದನ್ನು ಹೊಂದಿದ್ದ. ವಸಿಷ್ಠಪುತ್ರ ಪುಳುಮಾಯಿ ಅಥವಾ 2ನೇ ಪುಳುಮಾಯಿ (ಕ್ರಿ.ಶ 130-159): ಈತ ಗೌತಮಿಪುತ್ರ ಶಾತಕರ್ಣಿಯ ಮಗ.
ಇವನ ಬಿರುದುಗಳು 'ನವನಗರ ಸ್ವಾಮಿ' ಮತ್ತು 'ಆಂಧ್ರ ರಾಜ'. ಯಜ್ಞಶ್ರೀ ಶಾತಕರ್ಣಿ (ಕ್ರಿ.ಶ 170-199): ಈತ ಶಾತವಾಹನರ ಕೊನೆಯ ಪ್ರಬಲ ದೊರೆ.
ಇವನ ನಾಣ್ಯಗಳ ಮೇಲೆ ಹಡಗುಗಳ ಚಿತ್ರಗಳನ್ನು ಕಾಣಬಹುದು.
ಆಡಳಿತ ಮತ್ತು ಆರ್ಥಿಕತೆ
ಆಡಳಿತವು ವಂಶಪಾರಂಪರ್ಯವಾಗಿತ್ತು.
ಇವರ ಆಡಳಿತದಲ್ಲಿ
ಆಹಾರ ಎಂಬ ಪ್ರಮುಖ ಪ್ರಾಂತೀಯ ವಿಭಾಗಗಳಿದ್ದವು, ಇದರ ಮುಖ್ಯಸ್ಥನನ್ನು ಅಮಾತ್ಯ ಅಥವಾ ರಾಜ್ಯಪಾಲ ಎನ್ನುತ್ತಿದ್ದರು.
ಭೂ ಕಂದಾಯ ಪ್ರಮುಖ ಆದಾಯದ ಮೂಲವಾಗಿದ್ದು, ಭೂ ಉತ್ಪತ್ತಿಯ 1/6 ಭಾಗವನ್ನು ತೆರಿಗೆಯಾಗಿ ಸಂಗ್ರಹಿಸಲಾಗುತ್ತಿತ್ತು.
ಪೈಠಾಣವು ಇವರ ಪ್ರಮುಖ ನೆಯ್ಗೆ ಕೇಂದ್ರವಾಗಿತ್ತು.
ರೋಮ್ ಮತ್ತು ಗ್ರೀಕ್ ಜೊತೆ ವ್ಯಾಪಾರ ಸಂಪರ್ಕ ಹೊಂದಿದ್ದರು.
ಅತಿ ಹೆಚ್ಚು ಕಾಳುಮೆಣಸನ್ನು ರಫ್ತು ಮಾಡುತ್ತಿದ್ದರು.
ಸಂಸ್ಕೃತದಲ್ಲಿ ಇದನ್ನು 'ಯವನ ಪ್ರಿಯ' ಎಂದು ಕರೆಯಲಾಗುತ್ತಿತ್ತು. ಪ್ರಮುಖ ಬಂದರುಗಳು ಭರೂಚ್ ಮತ್ತು ಅರಿಕಮೇಡು.
ಧಾರ್ಮಿಕ ಮತ್ತು ಸಾಮಾಜಿಕ ವ್ಯವಸ್ಥೆ
ಶಾತವಾಹನರು ಮೂಲತಃ ಬ್ರಾಹ್ಮಣ ಧರ್ಮದವರಾಗಿದ್ದು, ನಂತರ ಬೌದ್ಧ ಮತಾವಲಂಬಿಗಳಾದರು.
ಕರ್ನಾಟಕದಲ್ಲಿರುವ ತಾಳಗುಂದದ ಪ್ರಣವೇಶ್ವರ ದೇವಾಲಯವು ಶಾತವಾಹನರ ರಚನೆಯಾಗಿದ್ದು, ಇದು ಕರ್ನಾಟಕದಲ್ಲಿ ಸ್ಥಾಪನೆಗೊಂಡ ಮೊದಲ ಶೈವ ಮಂದಿರವಾಗಿದೆ.
ಮಹಿಳೆಯರ ಸ್ಥಾನಮಾನ ಉನ್ನತವಾಗಿದ್ದು, ಅವರು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರು.
ಕಲೆ ಮತ್ತು ವಾಸ್ತುಶಿಲ್ಪ
ಚೈತ್ಯಾಲಯಗಳು, ವಿಹಾರಗಳು, ಮತ್ತು ಸ್ತೂಪಗಳು ಇವರ ಪ್ರಮುಖ ರಚನೆಗಳಾಗಿವೆ.
ಚೈತ್ಯಾಲಯಗಳು ಬೌದ್ಧರ ಪ್ರಾರ್ಥನಾ ಮಂದಿರಗಳು.
ಇವರ ಪ್ರಮುಖ ಚೈತ್ಯಾಲಯಗಳಲ್ಲಿ ಮಹಾರಾಷ್ಟ್ರದ ಕಾರ್ಲೆ ಚೈತ್ಯಾಲಯ ದೊಡ್ಡದಾಗಿದೆ.
ವಿಹಾರಗಳು ಬೌದ್ಧ ಭಿಕ್ಷುಗಳು ವಾಸಿಸುವ ಸ್ಥಳಗಳಾಗಿವೆ.
ಸ್ತೂಪಗಳು ಆಂಧ್ರ ಪ್ರದೇಶದ ಅಮರಾವತಿ, ಘಂಟಿಸಾಲ, ಜಗ್ಗಯ್ಯಪೇಟ, ಮತ್ತು ನಾಗಾರ್ಜುನಕೊಂಡಗಳಲ್ಲಿ ಕಂಡುಬರುತ್ತವೆ.
ಅಜಂತಾ ಗುಹೆಯ 9ನೇ ಮತ್ತು 10ನೇ ಗುಹೆಗಳಲ್ಲಿ ಬುದ್ಧನ ವರ್ಣಚಿತ್ರಗಳು ಕಂಡುಬರುತ್ತವೆ.

No comments:
Post a Comment